ರಾಷ್ಟ್ರೀಯ ಹೆದ್ದಾರಿ ಬಳಿ ಬೆನ್ನಟ್ಟಿ ಯುವಕನ ಬರ್ಬರ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ ಕೋಲಾರ ಮೂಲದ ಭಾರ್ಗವ್ (24) ಅವರು ಜು.12ರಂದು ಕಾರಿನಲ್ಲಿ ಹೋಗುತ್ತಿದ್ದಾಗ ಮಸಂದ್ರ-ಗಂಗಾಪುರ ಗ್ರಾಮದ ನಡುವಿನ ಮೈಲಾಪುರ ಗೇಟ್‌ನಲ್ಲಿ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿತ್ತು. ಬೆಂಗಳೂರು: ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದ್ದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನಂದಗುಡಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.ಕೋಲಾರ ಮೂಲದ ಭಾರ್ಗವ್ (24) ಅವರು ಜು.12ರಂದು ಕಾರಿನಲ್ಲಿ ಹೋಗುತ್ತಿದ್ದಾಗ ಮಸಂದ್ರ-ಗಂಗಾಪುರ ಗ್ರಾಮದ ನಡುವಿನ ಮೈಲಾಪುರ ಗೇಟ್‌ನಲ್ಲಿ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿತ್ತು.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇದರಂತೆ ಪ್ರಜ್ವಲ್, ಪ್ರವೀಣ್, ಪ್ರಭು ಮತ್ತು ಅಶೋಕ್ ಎಂಬ ನಾಲ್ಕು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.ಭಾರ್ಗವ್ ಮತ್ತು ಬಂಧಿತ ಆರೋಪಿ ಪ್ರವೀಣ್ ಸಹೋದ್ಯೋಗಿಗಳಾಗಿದ್ದು, ಇಬ್ಬರ ನಡುವೆ ಕೆಲಸಕ್ಕೆ ಸಂಬಂಧಿಸಿದಂತೆ ಮನಸ್ತಾಪಗಳಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ.